Copy Right...!

I firstly declare here that all the content written in the blog is exclusively written by me and I hold the copyrights of each and everything. Be it a poem or a novel or a story are exclusively owned by me. This declaration is important in a world that seems so worried of piracy.

Saturday, October 29, 2011

ಬಣ್ಣದ ಚಿಟ್ಟೆ - ಭಾಗ 4


ಬಣ್ಣದ ಚಿಟ್ಟೆ - ಭಾಗ 1

ಬಣ್ಣದ ಚಿಟ್ಟೆ - ಭಾಗ 2

ಬಣ್ಣದ ಚಿಟ್ಟೆ - ಭಾಗ 3



“ನಮ್ಮ ಮದುವೆಗೂ ಮುಂಚೆಯೆ ಹೇಳಿದ್ದೇನಲ್ಲ, ಬಣ್ಣದ ಚಿಟ್ಟೆಯ ಬಗ್ಗೆ. ಇವಳು ಅವಳೇ.”

“ಓಹ್ ! ಇವಳೇನಾ ಅವಳು ?” ಒಂದು ಕ್ಷಣ ಬಿಟ್ಟು, “ತಪ್ಪು ಮಾಡಿರೋದು ಅವಳು, ನಾವಲ್ಲ. ನಾವ್ಯಾಕೆ ಅವಳನ್ನು ಕಂಡು ಬೇರೆ ಅಂಗಡಿಗೆ ಹೋಗಬೇಕು ? ಬನ್ನಿ, ನಾವು ಅದೇ ಅಂಗಡಿಯಲ್ಲಿ ಬಟ್ಟೆ ಖರೀದಿ ಮಾಡೋಣ” ತ್ರಿವೇಣಿ ನುಡಿದಳು.

ಮೆಟ್ಟಲುಗಳ ಮೇಲೆ ನಿಂತಿದ್ದ ಅವಳು ಕೇವಲ ‘ನನ್ನ’ ಭೂತಕಾಲಕ್ಕೆ ಮಾತ್ರ ಸಂಬಂಧಿಸಿದ್ದಳು. ಆದರೆ ತ್ರಿವೇಣಿ ಮಾತನಾಡುವಾಗ ‘ನಾವು’ ಎಂಬ ಪದವನ್ನು ಬಳಸಿದ್ದಳು. ಇದು ಅವಳಿಂದ ನಾನು, ನನ್ನಿಂದ ಅವಳು ಬೇರೆಯಲ್ಲ ಎಂಬುದನ್ನು ಅವ್ಯಕ್ತವಾಗಿ ಸೂಚಿಸುತಿತ್ತು. ಬಣ್ಣದ ಚಿಟ್ಟೆಗೂ ತ್ರಿವೇಣಿಗೂ ಹೋಲಿಸಿ ನೋಡಿದೆ. ಭೂಮಿ – ಆಕಾಶದಷ್ಟು ಅಂತರ ಕಂಡು ಬಂತು. ನಾನು ಪ್ರತಿಯಾಗಿ ಮಾತನಾಡಬೇಕೆನ್ನುವಷ್ಟರಲ್ಲೆ ಯಾರೊ ಹಿಂದಿನಿಂದ ನನ್ನ ಭುಜಕ್ಕೆ ಡಿಕ್ಕಿ ಹೊಡೆದರು.

“ಏಯ್ ! ಸ್ವಲ್ಪ ನೋಡಿಕೊಂಡು ಹೋಗಿ” ನಾನು ಜೋರಾಗಿ ನುಡಿದೆ.

“Sorry ಸರ್, sorry” ಆ ವ್ಯಕ್ತಿ ಹಿಂದಕ್ಕೆ ತಿರುಗಿ ನುಡಿದ.

ನಾನು ಅವನನ್ನು ಎಲ್ಲಿಯೊ ನೋಡಿದ್ದೇನೆಂದೆನಿಸಿತು. ಆದರೆ ಎಲ್ಲಿಯಂತ ನೆನಪಿಗೆ ಬರಲಿಲ್ಲ. ಎಷ್ಟೆ ಯೋಚಿಸಿದರೂ ಅವನ್ಯಾರು ಎಂಬುದು ಹೊಳೆಯಲಿಲ್ಲ. ಅವನು ನೇರವಾಗಿ ಹೋಗಿ ಬಣ್ಣದ ಚಿಟ್ಟೆ ಮುಂದೆ ಹೋಗಿ ನಿಂತನು. ಅವಳು ಅವನ್ನು ಕಂಡು ಗಾಬರಿಯಾದಂತೆ ತೋರಿತು. ಅವನು ಅವಳ ಜೊತೆ ಏನನ್ನೊ ಮಾತನಾಡತೊಡಗಿದ. ಆದರೆ ಧ್ವನಿ ಮಾತ್ರ ನಾವು ನಿಂತಲ್ಲಿನವರೆಗೂ ಕೆಳಿಸಿ ಬರಲಿಲ್ಲ.

“ಯಾರವನು ?” ತ್ರಿವೇಣಿ ಪ್ರಶ್ನಿಸಿದಳು.

ಅದನ್ನೇ ನಾನೂ ಯೋಚಿಸುತ್ತಿರುವೆ. ಎಲ್ಲಿಯೊ ನೋಡಿದ ನೆನಪು. ಆದರೆ ಎಲ್ಲಿ ಅಂತ ನೆನಪಿಗೆ ಬರುತ್ತಿಲ್ಲ”

“ಯಾರಾದರೇನು, ಬನ್ನಿ, ನಾವು ನಮ್ಮ ಕೆಲಸ ನೋಡೊಣ” ಎನ್ನುತ್ತಾ ತ್ರಿವೇಣಿ ದೇವಾನಂದ ಸಾರಿ ಸೆಂಟರ್ ನತ್ತ ಹೆಜ್ಜೆ ಹಾಕಿದಳು. ನಾನು ಅವಳನ್ನು ಅನುಸರಿಸಿದೆ.

ನಾವು ಎಂಟಡಿ ಮುಂದಕ್ಕೆ ಹೋದಾಗ, ಅವನು ತನ್ನ ಜೇಬಿನಿಂದ ಪಿಸ್ತೂಲು ತೆಗೆಯುತ್ತಿರುವುದು ಕಂಡು ಬಂತು. ನಾನು ತ್ರಿವೇಣಿಯನ್ನು ಮುಂದೆ ಹೆಜ್ಜೆ ಇಡದಂತೆ ತಡೆದೆ.

“ಥೂ ! ವೇಶ್ಯೆಗಿಂತಲೂ ಕೀಳು ನೀನು. ನಿನ್ನಂತಹ ನಾಯಿಗೆ ಈ ಜಗತ್ತಿನಲ್ಲಿ ಇರಲು ಯಾವ ಯೋಗ್ಯತೆ ಕೂಡ ಇಲ್ಲ.” ಎನ್ನುತ್ತಾ ಅವನು ಅವಳ ಎದೆಗೆ ಪಿಸ್ತೂಲಿನಿಂದ ಗುರಿ ಇಟ್ಟನು.

“ಬೇಡ, ನನ್ನನ್ನು ಕೊಲ್ಲಬೇಡ” ಅವಳು ಭಯದಿಂದ ನುಡಿದಳು.

‘ಛಾಂಯ್…..ss… ಛಾಂಯ್…..ss… ಛಾಂಯ್….ss… ಛಾಂಯ್…..ss… ಛಾಂಯ್…..ss… ಛಾಂಯ್’

ಅವನು ಅವಳ ಮೇಲೆ ಕಿಂಚಿತ್ತೂ ಕರುಣೆ ತೋರಿಸದೆ ಒಟ್ಟು ಆರು ಬಾರಿ ಟ್ರಿಗರ್ ಎಳಿದಿದ್ದನು. ಅವಳು ಕುಸಿದು ಬಿದ್ದಳು. ಮೆಟ್ಟಿಲುಗಳೆಲ್ಲ ರಕ್ತ ರಂಜಿತವಾದವು. ಅವನ ಕೈಯಿಂದ ಪಿಸ್ತೂಲು ಜಾರಿ ನೆಲಕ್ಕೆ ಬಿತ್ತು. ಅವನು ಅಲ್ಲಿಯೆ ಕುಸಿದು ಕುಳಿತ. ತನ್ನೆರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಸಣ್ಣದಾಗಿ ರೋಧಿಸತೊಡಗಿದ. ನೋಡು – ನೋಡುತ್ತಿದ್ದಂತೆ ಜನ ಜಮಾಯಿಸತೊಡಗಿತು. ನಾನು ಮತ್ತು ತ್ರಿವೇಣಿ ಇದನ್ನೆಲ್ಲ ಕಿಂಕರ್ತವ್ಯವಿಮೂಡರಾಗಿ ನೋಡುತ್ತಾ ನಿಂತಿದ್ದೇವು. ಕಣ್ಮುಂದೆಯೆ ಸಿನಿಮಿಯವಾಗಿ ಒಂದು ಕೊಲೆ ನಡೆದು ಹೋಗಿತ್ತು. ನಾವು ಅದಕ್ಕೆ ಸಾಕ್ಷಿಯಾಗಿದ್ದೇವು.

ಸುಮಾರು ಹದಿನೈದು ನಿಮಿಷಗಳ ನಂತರ ಪೊಲಿಸ್ ಜೀಪೊಂದು ಬಂದು ನಿಂತಿತು. ಅದರಲ್ಲಿನಿಂದ ಒಬ್ಬ ಇನ್ಸಪೆಕ್ಟರ್ ಹಾಗೂ ಮೂವರು ಪೇದೆಗಳು ಕೆಳಗಿಳಿದರು. ಅವರೆಲ್ಲ ನೇರವಾಗಿ ದೇವಾನಂದ ಸಾರಿ ಸೆಂಟರ್ ನತ್ತ ನಡೆದು ಬಂದರು.

“ಯಾರು ಕೊಲೆ ಮಾಡಿದ್ದು ?” ಇನ್ಸಪೆಕ್ಟರ್ ಸುತ್ತಲೂ ನೆರೆದಿದ್ದವರನ್ನು ನೋಡುತ್ತಾ ಪ್ರಶ್ನಿಸಿದ. ಗುಂಪಿನಲ್ಲಿ ಹಿಂದೆ ನಿಂತಿದ್ದವರು ಜಾಗಾ ಖಾಲಿ ಮಾಡತೊಡಗಿದರು. ನಮಾಜ್ ಮಾಡಲು ಹೋಗಿ ಮಸೀದಿ ಕೊರಳಿಗೆ ಕಟ್ಟಿಕೊಳ್ಳುವುದು ಯಾರಿಗೂ ಬೇಕಿರಲಿಲ್ಲ. ನಾನೇ ಉತ್ತರಿಸಬೇಕೆಂದುಕೊಳ್ಳುತ್ತಿರುವಾಗಲೆ –

“ನಾನೇ ಸರ್ !” ಅವನು ನುಡಿದ. ಅವನ ಧ್ವನಿ ಆಶ್ಚರ್ಯಕರ ರೀತಿಯಲ್ಲಿ ಶಾಂತವಾಗಿತ್ತು.

“ಯಾರು ನೀನು ? ಇವಳಿಗೂ ನಿನಗೂ ಏನು ಸಂಬಂಧ ?” ಒಮ್ಮೆ ಹೆಣದ ಕಡೆ ನೋಡಿ, ಅವನ ಮೇಲೆ ತನ್ನ ದೃಷ್ಠಿಯನ್ನು ಕೇಂದ್ರಿಕೃತಗೊಳಿಸುತ್ತಾ ಇನ್ಸಪೆಕ್ಟರ್ ಕೇಳಿದ.

“ಇವಳು ನನ್ನ ಹೆಂಡ್ತಿ ಸರ್.” ಅವನು ಉತ್ತರಿಸಿದ.

ನನಗೆ ತಕ್ಷಣ ಫ್ಲ್ಯಾಶ್ ಆಯಿತು. ಅಂದರೆ ಇವನು ರವೀಂದ್ರ, ಆರು ವರ್ಷಗಳ ಹಿಂದೆ ಆ ದಿನ ಸಂಜೆ ಅವಳ ಜೊತೆ ಕಾರಿನಲ್ಲಿ ಬಂದಿದ್ದವನು.

“ಯಾಕೆ ಕೊಲೆ ಮಾಡಿದೆ ?” ಇನ್ಸಪೆಕ್ಟರ್ ಪ್ರಶ್ನಿಸಿದ.

“ಇಂತಹವಳನ್ನು ಹೆಂಡ್ತಿಯಾಗಿ ಕಟ್ಟಿಕೊಂಡರೆ ಕೊಲೆ ಅಲ್ಲದೆ ಇನ್ನೇನು ತಾನೆ ಮಾಡಲು ಸಾಧ್ಯ ಸರ್ ? ಆರು ವರ್ಷಗಳಿಂದ ಇವಳ ಚೆಲ್ಲಾಟ ನೋಡಿ – ನೋಡಿ ಸಾಕಾಗಿ ಕೊನೆಗೆ ಇವಳನ್ನು ಮುಗಿಸುವ ನಿರ್ಧಾರ ಕೈಗೊಂಡೆ.” ಅವನು ಉತ್ತರಿಸಿದ.

ಇನ್ಸಪೆಕ್ಟರ್ ಅವನ ಕೈಗೆ ಬೇಡಿ ತೊಡಿಸಿ ಅವನನ್ನು ಒಬ್ಬ ಪೇದೆಯ ಕೈಗೆ ಒಪ್ಪಿಸಿದ. ಆನಂತರ ವಾಯರ್ಲೆಸ್ ನಲ್ಲಿ ಏನನ್ನೊ ಮಾತನಾಡತೊಡಗಿದ.

ನಾನು ತ್ರಿವೇಣಿಯ ಮುಖ ನೋಡಿದೆ. ಅವಳ ಮುಖದಲ್ಲಿ ವಿಷಾಧದ ಭಾವಗಳಿದ್ದವು.

“ಏನು ಮಾಡೋಣ ತ್ರಿವೇಣಿ ?” ನಾನು ಕೇಳಿದೆ.

“ಶಾಪಿಂಗ್ ಮುಂದಿನ ವಾರ ಮಾಡಿದರಾಯಿತು. ಮೊದಲು ಇಲ್ಲಿಂದ ಮನೆಗೆ ಹೋಗೊಣ ಬನ್ನಿ.” ಅವಳು ನುಡಿದಳು.

ನಾನು ಒಂದು ನಿಟ್ಟುಸಿರು ಬಿಟ್ಟು ಪಾರ್ಕಿಂಗ್ ಝೋನ್ ನತ್ತ ಹೆಜ್ಜೆ ಹಾಕಿದೆ. ಆರು ವರ್ಷಗಳ ಹಿಂದೆ ಆ ಬಣ್ಣದ ಚಿಟ್ಟೆ ನನ್ನನ್ನು ತಿರಸ್ಕರಿಸಿ ಹೋದದ್ದು ಒಳ್ಳೇಯದೆ ಆಗಿತ್ತು. ಒಂದು ವೇಳೆ ಅವಳು ನನ್ನ ಮಡದಿಯಾಗಿದ್ದಿದ್ದರೆ ಈ ದಿನ ರವೀಂದ್ರನ ಬದಲಿಗೆ ಆ ಇನ್ಸಪೆಕ್ಟರ್ ನನ್ನ ಕೈಗೆ ಬೇಡಿ ತೊಡಿಸುತ್ತಿದ್ದನೇನೋ ಯಾರಿಗೆ ಗೊತ್ತು. ದೇವರು ನನ್ನಿಂದ ಆ ಬಣ್ಣದ ಚಿಟ್ಟೆಯನ್ನು ದೂರ ಮಾಡಿದ್ದರಿಂದ ನಾನು ಅವನಿಗೆ ಎಂದಿಗೂ ಚಿರರುಣಿ….!

ಬಣ್ಣದ ಚಿಟ್ಟೆ - ಭಾಗ 3

ಆರು ವರ್ಷಗಳ ನಂತರ …..!

“ರೀ !” ಧ್ವನಿ ಕಿವಿಗಳ ತಮಟೆಗಳಿಗೆ ತಲಪುತ್ತಿರುವಂತೆಯೆ ಯಾರೋ ನನ್ನ ದೇಹವನ್ನು ಅಲುಗಿಸುತ್ತಿರುವ ಅನುಭವವಾಯಿತು.

“ರೀ, ಎದ್ದೇಳ್ರಿ, ನಾಲ್ಕು ಗಂಟೆಯಾಗಿದೆ.”

ಕಣ್ಣುಜ್ಜುತ್ತಾ ಎದ್ದು ಕುಳಿತಾಗ ಮಂಚದ ಪಕ್ಕದಲ್ಲಿ ತ್ರಿವೇಣಿ ತನ್ನ ಟೊಂಕದ ಮೇಲೆ ಕೈಗಳನ್ನಿಟ್ಟು ಕೋಪದ ಮುದ್ರೆಯಲ್ಲಿ ನಿಂತಿರುವುದು ಕಂಡುಬಂತು.

“ಎಷ್ಟು ಸಲ ಹೇಳಿದ್ದೀನಿ ನಿಮಗೆ, ಮಧ್ಯಾಹ್ನ ಮಲಗಬಾರದೂಂತ. ಆದರೆ ನನ್ನ ಮಾತು ಒಂದು ಸಲವಾದರೂ ಕೇಳ್ತಿರಾ ನೀವು ?” ಅವಳು ಕೇಳುವ ಶೈಲಿಗೆ ನನಗೆ ನಗು ಬಂತು.

“ನಾನು ಮಧ್ಯಾಹ್ನ ಮನೆಯಲ್ಲಿ ಇರೋದು ಸಂಡೇ ಮಾತ್ರ. ಈ ದಿನವಾದರೂ ಆರಾಮವಾಗಿ ಮಲಗಲು ಬಿಡಬಾರದಾ?” ನಾನೂ ಅವಳದೆ ಶೈಲಿಯಲ್ಲಿ ಕೇಳಿದೆ.

“ಅದೆಲ್ಲ ನನಗೆ ಗೊತ್ತಿಲ್ಲ. ನೀವು ಈ ದಿನ ನನಗೆ ಶಾಪಿಂಗ್ ಮಾಡಿಸುವುದಾಗಿ ಹೇಳಿದ್ರಿ. ಸೋ, ನೀವೀಗ ರೇಡಿಯಾಗ್ತಾ ಇದ್ದಿರಾ ಅಷ್ಟೆ” ಅವಳು ನನ್ನ ರೆಟ್ಟೆ ಹಿಡಿದು ಮಂಚದಿಂದ ಬಲವಂತವಾಗಿ ಎಬ್ಬಿಸುತ್ತಾ ನುಡಿದಳು.

ಕಳೆದ ಆರು ವರ್ಷಗಳಲ್ಲಿ ನನ್ನ ಜೀವನ ಸಾಕಷ್ಟು ತಿರುವು ಪಡೆದುಕೊಂಡಿದೆ. ನಾಲ್ಕು ವರ್ಷಗಳ ಹಿಂದೆ ಪ್ರೌಡಶಾಲಾ ಶಿಕ್ಷಕನಾಗಿ ನೇಮಕಗೊಂಡಾಗಿನಿಂದಲೂ ನನ್ನ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಬ್ಯಾಂಕಿನಿಂದ ಸಾಲ ಪಡೆದು ಸ್ವಂತ ಮನೆಯನ್ನು ಕಟ್ಟಿಸಿದ್ದಾಗಿದೆ. ಅಟ್ಲಸ್ ಸೈಕಲ್ ಜಾಗದಲ್ಲಿ ಸ್ಪ್ಲೆಂಡರ್ ಬೈಕ್ ಬಂದಿದೆ. ಹೋದ ವರ್ಷವಷ್ಟೆ ತ್ರಿವೇಣಿ ನನ್ನ ಬಾಳ ಸಂಗಾತಿಯಾಗಿ ಜೀವನವನ್ನು ಪ್ರವೇಶಿಸಿದ್ದಾಳೆ. ಈಗ ಬದುಕಿನಲ್ಲಿ ಸಾಕಷ್ಟು ಸಂತೋಷವೂ ನೆಮ್ಮದಿಯೂ ಇದೆ.

ಅರ್ಧ ಗಂಟೆಯ ನಂತರ ನಾನು ಹೊರಗಡೆ ಹೋಗುವುದಕ್ಕಾಗಿ ಸಿದ್ಧನಾಗಿದ್ದೆ. ಆದರೆ ತ್ರಿವೇಣಿ ಮಾತ್ರ ಇನ್ನು ಕನ್ನಡಿಯ ಮುಂದಿನಿಂದ ಸರೆದಿರಲಿಲ್ಲ. ಅವಳು ಮುಖಕ್ಕೆ ಪೌಡರ್ ಹಚ್ಚಿಕೊಳ್ಳುತ್ತಿದ್ದಳು. ಅವಳ ಮುಖ ನೈಸರ್ಗಿಕವಾಗಿಯೆ ಅಷ್ಟೊಂದು ಬೆಳ್ಳಗಿರುವಾಗ ಮತ್ತೆ ಯಾಕೆ ಪೌಡರ್ ಹಚ್ಚಿಕೊಳ್ಳುತ್ತಾಳೊ ನನಗಂತೂ ಇದುವರೆಗೂ ಅರ್ಥವಾಗಿಲ್ಲ.

“ನನ್ನನ್ನು ಎಬ್ಬಿಸುವುದಕ್ಕೂ ಮುಂಚೆಯೇ ನೀನು ರೆಡಿಯಾಗಿರಬೇಕಿತ್ತು ವೇಣಿ” ಕನ್ನಡಿಯಲ್ಲಿ ಕಾಣಿಸುತ್ತಿದ್ದ ಅವಳ ಪ್ರತಿಬಿಂಬವನ್ನು ನೋಡುತ್ತಾ ನುಡಿದೆ.

“ಆಯ್ತು ಮಹಾರಾಯರೆ, ಆಯ್ತು.” ಒಂದೇ ಒಂದು ಕ್ಷಣಕ್ಕೊಸ್ಕರ ಕನ್ನಡಿಯಿಂದಲೆ ತನ್ನ ದೃಷ್ಟಿಯನ್ನು ನನ್ನ ಮೇಲೆ ನೆಟ್ಟು, ಮತ್ತೆ ಮೇಕಪ್ ಬಾಕ್ಸಿನಿಂದ ಏನನ್ನೊ ತೆಗೆಯತೊಡಗಿದಳು. ಅವಳ ಈ ‘ಆಯ್ತು’ ಎಂಬ ಪದಕ್ಕೆ ‘ಈಗ ಶುರುವಾಯ್ತು’ ಎಂಬರ್ಥವಿರಬೇಕು.

ಸುಮಾರು ಹದಿನೈದು ನಿಮಿಷಗಳ ನಂತರ ನಾವು ಮನೆಯಿಂದ ಹೊರಗೆ ಕಾಲಿಟ್ಟೇವು. ರಿಸ್ಟ್ ವಾಚ್ ನಲ್ಲಿ ಸಮಯ ನೋಡಿಕೊಂಡಾಗ ಅದು ಐದು ಗಂಟೆಗೆ ಹತ್ತು ನಿಮಿಷ ಕಡಿಮೆ ಇರುವುದನ್ನು ತೋರಿಸುತಿತ್ತು. ಬೈಕ್ ಏರಿ ಕುಳಿತಾಗ –

“ಯಾವ ಕಡೆ ಹೋಗೊಣ ?” ಹಿಂದೆ ತಿರುಗಿ ಆದರ್ಶ ಗಂಡನ ಪ್ರಶ್ನೆ ಕೇಳಿದೆ.

“ಸುಪರ್ ಮಾರ್ಕೇಟ್ ನಲ್ಲಿ ಒಳ್ಳೆ ಸೀರೆ ಬಂದಿವೆಯಂತ ಅನುಸೂಯಾ ಆಂಟಿ ಹೇಳ್ತಾ ಇದ್ದರು. ಮೊದಲಿಗೆ ಅಲ್ಲಿಗೇ ಹೋಗೊಣ” ತನ್ನ ಒಂದು ಕೈಯನ್ನು ನನ್ನ ಭುಜದ ಮೇಲೆ ಇಟ್ಟು, ಇನ್ನೊಂದು ಕೈಯನ್ನು ನನ್ನ ಎದೆಯನ್ನು ಬಳಸುತ್ತಾ ನುಡಿದಳು.

ಜೇಬಿನಲ್ಲಿದ್ದ ಹಣವನ್ನು ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕೊ ಮನದಲ್ಲಿಯೆ ಲೆಕ್ಕ ಹಾಕುತ್ತಾ ನಾನು ಮರುಮಾತನಾಡದೆ ಬೈಕನ್ನು ಸುಪರ್ ಮಾರ್ಕೇತ್ ಕಡೆಗೆ ಹೋಗುವ ರಸ್ತೆ ಮೇಲೆ ಓಡಿಸತೊಡಗಿದೆ. ಹದಿನೈದು ನಿಮಿಷಗಳ ನಂತರ ನಾವು ಸುಪರ್ ಮಾರ್ಕೇಟಿನಲ್ಲಿದ್ದೇವು.

“ನೀನು ಇಲ್ಲೆ ನಿಲ್ಲು, ನಾನು ಬೈಕ್ ಪಾರ್ಕ್ ಮಾಡಿ ಬರುತ್ತೇನೆ” ಎಂದು ನುಡಿದು ಪಾರ್ಕಿಂಗ್ ಝೋನ್ ಕಡೆಗೆ ಬೈಕ್ ತಳ್ಳಿಕೊಂಡು ನಡೆದೆ. ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿ ಬಂದು –

“ಈಗ ಯಾವ ಕಡೆ ಹೋಗೊಣ ?” ಅವಳನ್ನು ಕೇಳಿದೆ.

“ಅಲ್ಲಿ ಕಾಣಿಸುತ್ತಿದೆಯಲ್ಲ, ದೇವಾನಂದ ಸಾರಿ ಸೆಂಟರ್, ಅಲ್ಲಿಗೆ.” ಒಂದು ಕಡೆ ತೋರುಬೆರಳಿನಿಂದ ಸೂಚಿಸುತ್ತಾ ನುಡಿದಳವಳು.

ನಾನು ಗೊಣಾಡಿಸುತ್ತಾ ಮೌನವಾಗಿ ಅವಳ ಜೊತೆ ನಡೆದೆ. ಇನ್ನು ದೇವಾನಂದ ಸಾರಿ ಸೆಂಟರ್ ಹದಿನೈದು ಅಡಿ ದೂರವಿದೆ ಎನ್ನುವಷ್ಟರಲ್ಲಿಯೆ, ರಿಮೋಟ್ ಕಂಟ್ರೋಲ್ ನಿಂದ ಟಿ.ವಿ.ಯಲ್ಲಿನ ದೃಶ್ಯವೊಂದನ್ನು ಫ್ರೀಜ್ ಮಾಡುವಂತೆ, ಗಕ್ಕನೆ ನಿಂತೆ.

ಎದುರುಗಡೆ !

ದೇವಾನಂದ ಸಾರಿ ಸೆಂಟರ್ ನ ಮೆಟ್ಟಲುಗಳ ಮೇಲೆ ಅವಳು ನಿಂತಿದ್ದಳು. ಆರು ವರ್ಷಗಳ ಹಿಂದೆ ನನ್ನ ಜೀವನದಲ್ಲಿ ಬಿರುಗಾಳಿ ಎಬ್ಬಿಸಿ ಕತ್ತಲೆಯಲಿ ತಳ್ಳಿ ಮಾಯವಾದಾಕೆ, ಅವಳು, ಹೌದು ಅವಳೇ, ಬಣ್ಣದ ಚಿಟ್ಟೆ…!

ನಾನು ಆ ರೀತಿ ನಿಂತದ್ದು ಜೊತೆಗೆ ಬರುತ್ತಿದ್ದ ತ್ರಿವೇಣಿಗೆ ಆಶ್ಚರ್ಯ ಉಂಟು ಮಾಡಿತು.

“ಏನಾಯ್ತು ? ಯಾಕೆ ನಿಂತ್ರಿ?” ಅವಳು ಕೇಳಿದಳು.

“ಈ ಅಂಗಡಿ ಬೇಡ ತ್ರಿವೇಣಿ, ಬೇರೆ ಯಾವುದಾದರೂ ಅಂಗಡಿಗೆ ಹೋಗೊಣ.” ನಾನು ಶಾಂತವಾದ ಧ್ವನಿಯಲ್ಲಿ ನುಡಿದೆ.

“ಯಾಕ್ ಬೇಡ ?” ಅವಳು ಆಶ್ಚರ್ಯದಿಂದ ಕೇಳಿದಳು.

“ಸುಮ್ಮನೆ ಹೀಗೇ !”

“ಇಲ್ಲಿ ತುಂಬಾ ಒಳ್ಳೇ ಸೀರೆ ಸಿಗುತ್ತವಂತೆ ರೀ, ಅದೂ ಡಿಸ್ಕೌಂಟಿನಲ್ಲಿ” ಅವಳು ಒತ್ತಾಯಿಸುವಂತೆ ನುಡಿದಳು.

“ಅಲ್ಲಿ ನೋಡು, ಮೆಟ್ಟಿಲುಗಳ ಮೇಲೆ ನಿಂತಿದ್ದಾಳಲ್ಲ ಅವಳನ್ನು” ಕಣ್ಣುಗಳಲ್ಲೆ ಸೂಚಿಸುತ್ತ ನುಡಿದೆ.

“ಯಾರವಳು ?” ತ್ರಿವೇಣಿಯ ಧ್ವನಿ ಸಂದೇಹದಿಂದ ಕೂಡಿತ್ತು.


(ಭಾಗ 4ನ್ನು ಓದಿ)