ಬಣ್ಣದ ಚಿಟ್ಟೆ - ಭಾಗ 1
ಬಣ್ಣದ ಚಿಟ್ಟೆ - ಭಾಗ 2
ಬಣ್ಣದ ಚಿಟ್ಟೆ - ಭಾಗ 3
“ನಮ್ಮ ಮದುವೆಗೂ ಮುಂಚೆಯೆ ಹೇಳಿದ್ದೇನಲ್ಲ, ಬಣ್ಣದ ಚಿಟ್ಟೆಯ ಬಗ್ಗೆ. ಇವಳು ಅವಳೇ.”
“ಓಹ್ ! ಇವಳೇನಾ ಅವಳು ?” ಒಂದು ಕ್ಷಣ ಬಿಟ್ಟು, “ತಪ್ಪು ಮಾಡಿರೋದು ಅವಳು, ನಾವಲ್ಲ. ನಾವ್ಯಾಕೆ ಅವಳನ್ನು ಕಂಡು ಬೇರೆ ಅಂಗಡಿಗೆ ಹೋಗಬೇಕು ? ಬನ್ನಿ, ನಾವು ಅದೇ ಅಂಗಡಿಯಲ್ಲಿ ಬಟ್ಟೆ ಖರೀದಿ ಮಾಡೋಣ” ತ್ರಿವೇಣಿ ನುಡಿದಳು.
ಮೆಟ್ಟಲುಗಳ ಮೇಲೆ ನಿಂತಿದ್ದ ಅವಳು ಕೇವಲ ‘ನನ್ನ’ ಭೂತಕಾಲಕ್ಕೆ ಮಾತ್ರ ಸಂಬಂಧಿಸಿದ್ದಳು. ಆದರೆ ತ್ರಿವೇಣಿ ಮಾತನಾಡುವಾಗ ‘ನಾವು’ ಎಂಬ ಪದವನ್ನು ಬಳಸಿದ್ದಳು. ಇದು ಅವಳಿಂದ ನಾನು, ನನ್ನಿಂದ ಅವಳು ಬೇರೆಯಲ್ಲ ಎಂಬುದನ್ನು ಅವ್ಯಕ್ತವಾಗಿ ಸೂಚಿಸುತಿತ್ತು. ಬಣ್ಣದ ಚಿಟ್ಟೆಗೂ ತ್ರಿವೇಣಿಗೂ ಹೋಲಿಸಿ ನೋಡಿದೆ. ಭೂಮಿ – ಆಕಾಶದಷ್ಟು ಅಂತರ ಕಂಡು ಬಂತು. ನಾನು ಪ್ರತಿಯಾಗಿ ಮಾತನಾಡಬೇಕೆನ್ನುವಷ್ಟರಲ್ಲೆ ಯಾರೊ ಹಿಂದಿನಿಂದ ನನ್ನ ಭುಜಕ್ಕೆ ಡಿಕ್ಕಿ ಹೊಡೆದರು.
“ಏಯ್ ! ಸ್ವಲ್ಪ ನೋಡಿಕೊಂಡು ಹೋಗಿ” ನಾನು ಜೋರಾಗಿ ನುಡಿದೆ.
“Sorry ಸರ್, sorry” ಆ ವ್ಯಕ್ತಿ ಹಿಂದಕ್ಕೆ ತಿರುಗಿ ನುಡಿದ.
ನಾನು ಅವನನ್ನು ಎಲ್ಲಿಯೊ ನೋಡಿದ್ದೇನೆಂದೆನಿಸಿತು. ಆದರೆ ಎಲ್ಲಿಯಂತ ನೆನಪಿಗೆ ಬರಲಿಲ್ಲ. ಎಷ್ಟೆ ಯೋಚಿಸಿದರೂ ಅವನ್ಯಾರು ಎಂಬುದು ಹೊಳೆಯಲಿಲ್ಲ. ಅವನು ನೇರವಾಗಿ ಹೋಗಿ ಬಣ್ಣದ ಚಿಟ್ಟೆ ಮುಂದೆ ಹೋಗಿ ನಿಂತನು. ಅವಳು ಅವನ್ನು ಕಂಡು ಗಾಬರಿಯಾದಂತೆ ತೋರಿತು. ಅವನು ಅವಳ ಜೊತೆ ಏನನ್ನೊ ಮಾತನಾಡತೊಡಗಿದ. ಆದರೆ ಧ್ವನಿ ಮಾತ್ರ ನಾವು ನಿಂತಲ್ಲಿನವರೆಗೂ ಕೆಳಿಸಿ ಬರಲಿಲ್ಲ.
“ಯಾರವನು ?” ತ್ರಿವೇಣಿ ಪ್ರಶ್ನಿಸಿದಳು.
ಅದನ್ನೇ ನಾನೂ ಯೋಚಿಸುತ್ತಿರುವೆ. ಎಲ್ಲಿಯೊ ನೋಡಿದ ನೆನಪು. ಆದರೆ ಎಲ್ಲಿ ಅಂತ ನೆನಪಿಗೆ ಬರುತ್ತಿಲ್ಲ”
“ಯಾರಾದರೇನು, ಬನ್ನಿ, ನಾವು ನಮ್ಮ ಕೆಲಸ ನೋಡೊಣ” ಎನ್ನುತ್ತಾ ತ್ರಿವೇಣಿ ದೇವಾನಂದ ಸಾರಿ ಸೆಂಟರ್ ನತ್ತ ಹೆಜ್ಜೆ ಹಾಕಿದಳು. ನಾನು ಅವಳನ್ನು ಅನುಸರಿಸಿದೆ.
ನಾವು ಎಂಟಡಿ ಮುಂದಕ್ಕೆ ಹೋದಾಗ, ಅವನು ತನ್ನ ಜೇಬಿನಿಂದ ಪಿಸ್ತೂಲು ತೆಗೆಯುತ್ತಿರುವುದು ಕಂಡು ಬಂತು. ನಾನು ತ್ರಿವೇಣಿಯನ್ನು ಮುಂದೆ ಹೆಜ್ಜೆ ಇಡದಂತೆ ತಡೆದೆ.
“ಥೂ ! ವೇಶ್ಯೆಗಿಂತಲೂ ಕೀಳು ನೀನು. ನಿನ್ನಂತಹ ನಾಯಿಗೆ ಈ ಜಗತ್ತಿನಲ್ಲಿ ಇರಲು ಯಾವ ಯೋಗ್ಯತೆ ಕೂಡ ಇಲ್ಲ.” ಎನ್ನುತ್ತಾ ಅವನು ಅವಳ ಎದೆಗೆ ಪಿಸ್ತೂಲಿನಿಂದ ಗುರಿ ಇಟ್ಟನು.
“ಬೇಡ, ನನ್ನನ್ನು ಕೊಲ್ಲಬೇಡ” ಅವಳು ಭಯದಿಂದ ನುಡಿದಳು.
‘ಛಾಂಯ್…..ss… ಛಾಂಯ್…..ss… ಛಾಂಯ್….ss… ಛಾಂಯ್…..ss… ಛಾಂಯ್…..ss… ಛಾಂಯ್’
ಅವನು ಅವಳ ಮೇಲೆ ಕಿಂಚಿತ್ತೂ ಕರುಣೆ ತೋರಿಸದೆ ಒಟ್ಟು ಆರು ಬಾರಿ ಟ್ರಿಗರ್ ಎಳಿದಿದ್ದನು. ಅವಳು ಕುಸಿದು ಬಿದ್ದಳು. ಮೆಟ್ಟಿಲುಗಳೆಲ್ಲ ರಕ್ತ ರಂಜಿತವಾದವು. ಅವನ ಕೈಯಿಂದ ಪಿಸ್ತೂಲು ಜಾರಿ ನೆಲಕ್ಕೆ ಬಿತ್ತು. ಅವನು ಅಲ್ಲಿಯೆ ಕುಸಿದು ಕುಳಿತ. ತನ್ನೆರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಸಣ್ಣದಾಗಿ ರೋಧಿಸತೊಡಗಿದ. ನೋಡು – ನೋಡುತ್ತಿದ್ದಂತೆ ಜನ ಜಮಾಯಿಸತೊಡಗಿತು. ನಾನು ಮತ್ತು ತ್ರಿವೇಣಿ ಇದನ್ನೆಲ್ಲ ಕಿಂಕರ್ತವ್ಯವಿಮೂಡರಾಗಿ ನೋಡುತ್ತಾ ನಿಂತಿದ್ದೇವು. ಕಣ್ಮುಂದೆಯೆ ಸಿನಿಮಿಯವಾಗಿ ಒಂದು ಕೊಲೆ ನಡೆದು ಹೋಗಿತ್ತು. ನಾವು ಅದಕ್ಕೆ ಸಾಕ್ಷಿಯಾಗಿದ್ದೇವು.
ಸುಮಾರು ಹದಿನೈದು ನಿಮಿಷಗಳ ನಂತರ ಪೊಲಿಸ್ ಜೀಪೊಂದು ಬಂದು ನಿಂತಿತು. ಅದರಲ್ಲಿನಿಂದ ಒಬ್ಬ ಇನ್ಸಪೆಕ್ಟರ್ ಹಾಗೂ ಮೂವರು ಪೇದೆಗಳು ಕೆಳಗಿಳಿದರು. ಅವರೆಲ್ಲ ನೇರವಾಗಿ ದೇವಾನಂದ ಸಾರಿ ಸೆಂಟರ್ ನತ್ತ ನಡೆದು ಬಂದರು.
“ಯಾರು ಕೊಲೆ ಮಾಡಿದ್ದು ?” ಇನ್ಸಪೆಕ್ಟರ್ ಸುತ್ತಲೂ ನೆರೆದಿದ್ದವರನ್ನು ನೋಡುತ್ತಾ ಪ್ರಶ್ನಿಸಿದ. ಗುಂಪಿನಲ್ಲಿ ಹಿಂದೆ ನಿಂತಿದ್ದವರು ಜಾಗಾ ಖಾಲಿ ಮಾಡತೊಡಗಿದರು. ನಮಾಜ್ ಮಾಡಲು ಹೋಗಿ ಮಸೀದಿ ಕೊರಳಿಗೆ ಕಟ್ಟಿಕೊಳ್ಳುವುದು ಯಾರಿಗೂ ಬೇಕಿರಲಿಲ್ಲ. ನಾನೇ ಉತ್ತರಿಸಬೇಕೆಂದುಕೊಳ್ಳುತ್ತಿರುವಾಗಲೆ –
“ನಾನೇ ಸರ್ !” ಅವನು ನುಡಿದ. ಅವನ ಧ್ವನಿ ಆಶ್ಚರ್ಯಕರ ರೀತಿಯಲ್ಲಿ ಶಾಂತವಾಗಿತ್ತು.
“ಯಾರು ನೀನು ? ಇವಳಿಗೂ ನಿನಗೂ ಏನು ಸಂಬಂಧ ?” ಒಮ್ಮೆ ಹೆಣದ ಕಡೆ ನೋಡಿ, ಅವನ ಮೇಲೆ ತನ್ನ ದೃಷ್ಠಿಯನ್ನು ಕೇಂದ್ರಿಕೃತಗೊಳಿಸುತ್ತಾ ಇನ್ಸಪೆಕ್ಟರ್ ಕೇಳಿದ.
“ಇವಳು ನನ್ನ ಹೆಂಡ್ತಿ ಸರ್.” ಅವನು ಉತ್ತರಿಸಿದ.
ನನಗೆ ತಕ್ಷಣ ಫ್ಲ್ಯಾಶ್ ಆಯಿತು. ಅಂದರೆ ಇವನು ರವೀಂದ್ರ, ಆರು ವರ್ಷಗಳ ಹಿಂದೆ ಆ ದಿನ ಸಂಜೆ ಅವಳ ಜೊತೆ ಕಾರಿನಲ್ಲಿ ಬಂದಿದ್ದವನು.
“ಯಾಕೆ ಕೊಲೆ ಮಾಡಿದೆ ?” ಇನ್ಸಪೆಕ್ಟರ್ ಪ್ರಶ್ನಿಸಿದ.
“ಇಂತಹವಳನ್ನು ಹೆಂಡ್ತಿಯಾಗಿ ಕಟ್ಟಿಕೊಂಡರೆ ಕೊಲೆ ಅಲ್ಲದೆ ಇನ್ನೇನು ತಾನೆ ಮಾಡಲು ಸಾಧ್ಯ ಸರ್ ? ಆರು ವರ್ಷಗಳಿಂದ ಇವಳ ಚೆಲ್ಲಾಟ ನೋಡಿ – ನೋಡಿ ಸಾಕಾಗಿ ಕೊನೆಗೆ ಇವಳನ್ನು ಮುಗಿಸುವ ನಿರ್ಧಾರ ಕೈಗೊಂಡೆ.” ಅವನು ಉತ್ತರಿಸಿದ.
ಇನ್ಸಪೆಕ್ಟರ್ ಅವನ ಕೈಗೆ ಬೇಡಿ ತೊಡಿಸಿ ಅವನನ್ನು ಒಬ್ಬ ಪೇದೆಯ ಕೈಗೆ ಒಪ್ಪಿಸಿದ. ಆನಂತರ ವಾಯರ್ಲೆಸ್ ನಲ್ಲಿ ಏನನ್ನೊ ಮಾತನಾಡತೊಡಗಿದ.
ನಾನು ತ್ರಿವೇಣಿಯ ಮುಖ ನೋಡಿದೆ. ಅವಳ ಮುಖದಲ್ಲಿ ವಿಷಾಧದ ಭಾವಗಳಿದ್ದವು.
“ಏನು ಮಾಡೋಣ ತ್ರಿವೇಣಿ ?” ನಾನು ಕೇಳಿದೆ.
“ಶಾಪಿಂಗ್ ಮುಂದಿನ ವಾರ ಮಾಡಿದರಾಯಿತು. ಮೊದಲು ಇಲ್ಲಿಂದ ಮನೆಗೆ ಹೋಗೊಣ ಬನ್ನಿ.” ಅವಳು ನುಡಿದಳು.
ನಾನು ಒಂದು ನಿಟ್ಟುಸಿರು ಬಿಟ್ಟು ಪಾರ್ಕಿಂಗ್ ಝೋನ್ ನತ್ತ ಹೆಜ್ಜೆ ಹಾಕಿದೆ. ಆರು ವರ್ಷಗಳ ಹಿಂದೆ ಆ ಬಣ್ಣದ ಚಿಟ್ಟೆ ನನ್ನನ್ನು ತಿರಸ್ಕರಿಸಿ ಹೋದದ್ದು ಒಳ್ಳೇಯದೆ ಆಗಿತ್ತು. ಒಂದು ವೇಳೆ ಅವಳು ನನ್ನ ಮಡದಿಯಾಗಿದ್ದಿದ್ದರೆ ಈ ದಿನ ರವೀಂದ್ರನ ಬದಲಿಗೆ ಆ ಇನ್ಸಪೆಕ್ಟರ್ ನನ್ನ ಕೈಗೆ ಬೇಡಿ ತೊಡಿಸುತ್ತಿದ್ದನೇನೋ ಯಾರಿಗೆ ಗೊತ್ತು. ದೇವರು ನನ್ನಿಂದ ಆ ಬಣ್ಣದ ಚಿಟ್ಟೆಯನ್ನು ದೂರ ಮಾಡಿದ್ದರಿಂದ ನಾನು ಅವನಿಗೆ ಎಂದಿಗೂ ಚಿರರುಣಿ….!
No comments:
Post a Comment